Monday, July 29, 2013

ಹೀಗೊಂದು ಕಾನ್ಸಂಟ್ರೇಶನ್ ಕ್ಯಾಂಪ್

ದಿನಾಂಕ : ೨೬ ಜೂನ್ ೨೦೧೩

ಯಾವ ಜನ್ಮದ ಪಾಪದ ಫಲವೋ  ನಾನು ಕಾಣೆ ಮತ್ತೆ ಮತ್ತೆ ಒಬ್ಬಳೇ ವಿಮಾನ ಯಾನ ಮಾಡುವ ದುರ್ದೆಶೆ ಅದೂ ಕೇವಲ ಒಂದೇ ತಿಂಗಳ ಅಂತರದಲ್ಲಿ. ಮೊದಲೇ ನಂಗೆ ವಿಮಾನ ಯಾನ ಅಂದ್ರೆ ವಿಪರೀತ ಭಯ ! ಅದೂ ಮಂಗಳೂರು ವಿಮಾನ ನಿಲ್ದಾಣ ಅಂದ್ರೆ ಮುಗಿದೇ ಹೋಯಿತು .
      ಇನ್ನು ವಿಮಾನ ಯಾನದ ಸಮಯ ಅಂತೂ ತೀರ ಕಿರಿ ಕಿರಿಯಾಗೋ ಸಮಯ. ಜಗವೆಲ್ಲಾ ಮಲಗಿರಲು ಅವನೊಬ್ಬ ಎದ್ದ ,ಅಲ್ಲ ನಾವೆಲ್ಲಾ ಎದ್ದಿರುವೆವು. ವಿಮಾನ ಹೊರಡೋದು ಬೆಳಗ್ಗಿನ ಜಾವ ೪.೨೫ ಕ್ಕೆ. ಹಾಗಂತ ೪.೧೫ ಕ್ಕೆ ಏರ್ ಪೋರ್ಟ್ ಗೆ ಹೋಗೋದು ಸಾಧ್ಯವೇ? ಕನಿಷ್ಠ ಪಕ್ಷ ಒಂದು ಘಂಟೆ  ಮೊದಲು ಚೆಕ್ ಇನ್ ಆಗ ಬೇಕು . ಇಲ್ಲಂದ್ರೆ ಈ ಕೌಂಟರ್ ಕ್ಲೋಸ್ ! ಈ ಎಲ್ಲ ರಗಳೆ  ಬೇಡ ಅಂತ ನಾನೇ ಮನೆ ದೇವರಿಗೆ ಹೇಳಿ ಬಿಟ್ಟೆ. ಹೇಗೂ ನಂಗೆ ಜಾಗರಣೆ  ಖಾತ್ರಿ , ಸುಮ್ನೆ ನೀನು ನಿದ್ದೆ ಕೆಡೋದು ಬೇಡ ಬೇಗನೆ ನನ್ನನ್ನು  ಏರ್ ಪೋರ್ಟ್ ಮುಟ್ಟಿಸಿ , ನೆಮ್ಮದಿ ಇಂದ  ನಿದ್ರೆ ಮಾಡು, ಮಾರನೇ ದಿನ ಹೇಗೂ ಕಾಯಕವೇ ಕೈಲಾಸ ಅಲ್ವಾ ಅಂದೆ.
      ಹೀಗಾಗಿ ನಾನು ಹಿಂದಿನ ದಿನ ೧೧ ಘಂಟೆಗೆ ಏರ್ ಪೋರ್ಟ್  ತಲುಪಿದೆ. ನಂಗೆ ಯಾವ ಕೆಲಸ ಆದರೂ ಆದೀತು ಆದರೆ ಒಬ್ಬಳೇ  ಕಾಯೋ ಕೆಲಸ ರಾಮಾ ... ಬೇಡವೇ ಬೇಡ. ಅದರೂ ಅನಿವಾರ್ಯ ಕಾಯಲೇ ಬೇಕು ಎಂಬುದರ ಸ್ಪಷ್ಟ ಅರಿವು ಇದ್ದ ಕಾರಣ ಮೊದಲೇ ತಯಾರಿ ನಡೆಸಿದ್ದೆ. 'ತೇಜಸ್ವಿ'ಯವರ ಲಭ್ಯವಿದ್ದ   ಪಿಡಿಎಫ್  ಫಾರ್ಮ್ಯಾಟ್ ಪುಸ್ತಕಗಳನ್ನು ಮಡಿಲು ಗಣಕಕ್ಕೆ ಇಳಿಸಿಕೊಂಡಿದ್ದೆ. ಅಂತೂ ಹನ್ನೊಂದರಿಂದ ಒಂದುವರೆ ವರೆಗಿನ ಸಮಯ ಸರಿದಿದ್ದು  ಅರಿವಿಗೆ ಬರಲಿಲ್ಲ. ಸಮಯದ ಸದುಪಯೋಗ ಆಗಿತ್ತು. ಅಲ್ಲಿಂದ ಪ್ರಕ್ರಿಯೆಗಳನ್ನು ಮುಗಿಸಿ ಕೊಂಡು  ಮತ್ತೆ ಓದು ಮುಂದುವರೆಸಿದೆ. ಅಂತು  ಇಂತೂ ೪ ಕ್ಕೆ ನಮ್ಮನ್ನು ವಿಮಾನ ಹತ್ತಿ ಅಂತ ಸೂಚನೆ ಕೊಟ್ಟರು.
         ನಾನು ಏರ್ ಪೋರ್ಟ್ ಗೆ ಮೊದಲು ಹೋಗಲಿ ನಂತರ ಹೋಗಲಿ ನಂಗೆ ಸದಾ ಸ್ವಾಗತ ಕೊರೋದು ಒಂದೇ ಸೀಟು ಅದೇ ವಿಮಾನದ ರೆಕ್ಕೆ ಭಾಗದ ಸೀಟು ..ಏನು ಕಾಣದ ಸೀಟ್ ಅದು ನಂಗೆ ಖಂಡಿತವಾಗಿಯೂ ಗೊತ್ತು ಯಾಕಂದ್ರೆ ಯಾವ ವಿಮಾನ ಆದರೂ , ಯಾವ ಸಮಯದಲ್ಲಿಯೂ ಅದೇ ಸೀಟ್ ಬಿಟ್ಟರೆ ನಂಗೆ ಬೇರೆ ಸೀಟ್ ನಲ್ಲಿ ಕೂರೋಕೆ ಆ ಭಗವಂತ ಅವಕಾಶ ಮಾಡಿ ಕೊಡಲೇ ಇಲ್ಲ. ಆದರೆ ಈ ಬಾರಿ ಸ್ವಲ್ಪ ವಿಶೇಷ ರೆಕ್ಕೆಯಬದಿಯೇ ಸೀಟೆ ಆದರೂ ನಂಗೆ ಸಿಕ್ಕಿದ್ದು ತುರ್ತು ನಿರ್ಗಮನ ದ್ವಾರದ ಸೀಟ್ :) ಒಂದು ರೀತಿ ಒಳ್ಳೆಯದೇ ಆಯಿತು . ಸಾಮಾನ್ಯವಾಗಿ ನಾನು ಸೀಟ್ ನಲ್ಲಿ  ಕುಳಿತು ಕೊಳ್ಳೋ  ಮೊದಲು  ನನ್ನ ಸೀಟ್ ಗೂ ಆ  ತುರ್ತು ನಿರ್ಗಮನ ದ್ವಾರಕ್ಕೂ ಇರುವ ಸೀಟ್ ಗಳ ಅಂತರ ಮನನ ಮಾಡಿ ಕೊಂಡೆ ಆಸೀನಳಾಗೋದು. ಈ ಬಾರಿ ಆ ಗಣತಿ ಕಾರ್ಯ ಮಾಡುವ ಶ್ರಮ ಇಲ್ಲ .
     ಸೀಟ್ ನಲ್ಲಿ ಕೂತು ಓದೋಕೆ ಹಿಡಿದ್ದಿದ್ದ ತೇಜಸ್ವಿಯವರ ಮುನಿಶಾಮಿ ಮತ್ತು ಮಾಗಡಿ ಚಿರತೆ ಪುಸ್ತಕ ಓದೋಕೆ ಮತ್ತೆ ಶುರು ಹಚ್ಚಿದೇನೋ ಇಲ್ವೋ ಎಲ್ಲಿಂದಲೋ ಓಡಿ  ಬಂದ ಗಗನ ಸಖ ನೊಬ್ಬ ''ಮೇಡಂ,  ನಿಮ್ ವ್ಯಾನಿಟಿ ಬ್ಯಾಗ್, ಲ್ಯಾಪ್ ಟಾಪ್ ಎಲ್ಲ ಮೇಲೆ ಕ್ಯಾಬಿನ್ ನಲ್ಲಿ ಇಡಿ. ಇದು ಎಮರ್ಜೆನ್ಸಿ ಎಕ್ಸಿಟ್  ಇಲ್ಲಿ ದಾರಿ ಸುಗಮ ಇರ್ಬೇಕು ಇದು ಸುರಕ್ಷತಾ ಕ್ರಮ "ಎಂದಾಗ ನಂಗೆ ಹೇಗಾಗಿರ ಬೇಡ? ಥೂ ನನ್ನ ಹಣೆಬರಹವೇ ಅಂತ ನನ್ನ ಈ ಸೌಭಾಗ್ಯಕ್ಕೆ ಹಳಿದುಕೊಂಡು ಎಲ್ಲ ಎತ್ತಿ ಮೇಲೆ ಇಟ್ಟೆ. ಎಲ್ಲ ಡೌನ್ ಲೋಡ್ ಮಾಡಿ ಹಾಕಿ ಏನು ಪ್ರಯೋಜನ ? ಆ ಕ್ಷಣಕ್ಕೆ "ಪಾಪಿ ಸಮುದ್ರ ಹೊಕ್ಕರೂ ಮೊಣಕಾಲು ನೀರು'' ಎಂಬ ಗಾದೆ ತಟ್ಟನೆ ಮನಸ್ಸಿಗೆ ಬಂತು . ಏನು ಯೋಚನೆ ಬಂದರೂ ಪ್ರಯೋಜನ ಏನು? ಏನು ಇಲ್ಲ. ಹಾಗಂತ ಸುಮ್ಮನೆ ಕೂತು ಬಿಡುವ ಜಾಯ ಮಾನ  ನನ್ನದಲ್ಲ .  ಕೇಳಿಯೇ ಬಿಟ್ಟೆ "ನಂಗೆ ಬೇರೆ ಸೀಟ್ ಅಡ್ಜಸ್ಟ್ ಮಾಡಿ ಕೊಡಿ ಆ  ಸೀಟ್ ಬೇಡ" ಅಂತ. ನನ್ನ ಸುಯೋಗಕ್ಕೆ ಅವ ತೋರಿದ ೨-೩ ಸೀಟ್ ಸರಿ ಹೊಂದಲಿಲ್ಲ. ಸೀಟ್ ಬದಲು ಮಾಡೋದು , ಸಹ ಪ್ರಯಾಣಿಕರು  ಕಿರುಕುಳ ಕೊಡೋದು ಅದೊ೦ದು ದೊಡ್ಡ ದೃಶ್ಯಾವಳಿ ಆಗೋದು ,ಯಾವ ರಗಳೆ ಬೇಡ ಅಂತ ನನ್ನ ಪಾಲಿಗೆ ಬಂದಿದ್ದೆ ಪಂಚಾಮೃತ ಎಂದು ತೆಪ್ಪಗೆ ಇರಬೇಕಾಯಿತು .
        ಇಷ್ಟೆಲ್ಲಾ ಆದಮೇಲೆ  ಪೈಲಟ್ ಪ್ರಕಟಣೆ  ಪ್ರಕಟಿಸಿದರು . " ನಾನು ಕೋಮಲ್ ಶುಕ್ಲಾ , ನಾವು ನಿಗದಿತ ೩ ಘ೦ಟೆ ಅವಧಿಯೊಳಗೆ 2463 Km  ಕ್ರಮಿಸಿ ಮಂಗಳೂರು ತಲುಪಲಿದ್ದೇವೆ ." ಇನ್ನು ಮುಂದು ವರೆಯುತ್ತಿತ್ತು ಅಷ್ಟೆಲ್ಲ ಕೇಳಿಸಿ ಕೊಳ್ಳದೇ  ನನ್ನ ತರ್ಲೆ ಬುದ್ದಿ ವಾಹ್ ಈ ಭಾರಿ ವಿಮಾನ ಏನು ಆತಂಕ ಇಲ್ಲದೆ ಲ್ಯಾಂಡ್ ಆಗೋದು ಗ್ಯಾರಂಟೀ  ಅಂತ ರೆಕ್ಕೆ ಬಿಚ್ಚಿ ಕುಣಿಯೋಕೆ ಪ್ರಾರಂಭಿಸಿತು . ಕಾರಣ ಇಷ್ಟೇ  ಇದೆ ಮೊದಲ ಸಲ ನಂಗೆ ಲೇಡಿ ಪೈಲಟ್ ಸಿಕ್ಕಿದ್ದು. ಸಮಯ ೪.೧೫ ಇಷ್ಟಾಗಿ ೫ ನಿಮಿಷಕ್ಕೆ ಇನ್ನೊ೦ದು ಪ್ರಕಟಣೆ !!!  "ವಿಮಾನದ ತಾಂತ್ರಿಕ  ದೋಷದ ಕಾರಣ ದಿಂದ ವಿಮಾನದೊಳಗೆ ಬೆಳಗುತ್ತಿರುವ ದೀಪಗಳನ್ನು ನಂದಿಸಲಾಗುವುದು . ಪ್ರಯಾಣಿಕರೆಲ್ಲರೂ ಇದಕ್ಕಾಗಿ ಸಹಕರಿಯ ಬೇಕಾಗಿ ವಿನಂತಿ". ಮತ್ತೆರಡು ನಿಮಿಷಕ್ಕೆ ಮಗದೊಂದು ಪ್ರಕಟಣೆ ! 'ನಮ್ಮ ವಿಮಾನವು ಸುಮಾರು ೩೦ ನಿಮಿಷ ತಡವಾಗಿ ಹೊರಡುವುದು ಇದಕ್ಕಾಗಿ ನಾವು ವಿಷಾದಿಸುತ್ತೇವೆ.'  ಎರಡು ಬಾರಿ ಚುಕು ಬುಕು ಚುಕು ಬುಕು ದೀಪದ ಬೆಳಕಿನ ಕಣ್ಣು ಮುಚ್ಚಾಲೆ ! ಎರಡೇ ನಿಮಿಷಕ್ಕೆ ಹವಾ ನಿಯಂತ್ರಣ ವ್ಯವಸ್ಥೆ ಸ್ಥಗಿತ . ಮತ್ತೆ ಆನ್ ಆದರೂ ಮೊದಲಿನ೦ತೆ ಇರಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೆ ಕೂತೆ. ಕಣ್ಣು ಮುಚ್ಚಿ ಮುಚ್ಚಿ ಹೊಗೋ ವಷ್ಟು  ನಿದ್ದೆ ಕಣ್ಣಲ್ಲಿ ತುಳುಕುತ್ತಿತ್ತು..  ಸಮಯ ನೋಡಿಕೊಂಡೆ ೪.೪೫ . ಹಾಗೆ ೧೦ ನಿಮಿಷ ತೂಕಡಿಸಿ ಬಿಟ್ಟೆ . ಅಸಾಧ್ಯ ತಲೆನೋವು , ಬೆವರು  ಇಳಿದು ಬಟ್ಟೆ ಎಲ್ಲಾ  ಒದ್ದೆ ಮುದ್ದೆ . ಎಚ್ಚರ ಆಯಿತು ಆ ಸೆಕೆಗೆ . ರಾಮಾ ... ಹಲವು ವರ್ಷಗಳ ಕಾಲ ಕಾಡಿಸಿ ಕೊನೆಗೂ ಸಂಗೀತ ಚಿಕಿತ್ಸೆಯ ಪರಿಣಾಮವಾಗಿ ಕೆಲವಾರು ತಿಂಗಳು ಹಿಮ್ಮುಖ ವಾಗಿ ಪರಾರಿಯಾಗಿದ್ದ  ತಲೆ ನೋವು  ಭೀಕರ ಸ್ವರೂಪದಲ್ಲಿ ಆರ್ಭಟಿಸುತ್ತಿತ್ತು. ಈ ತಲೆನೋವು  ಒಂದು ಕಾರಣದಿಂದ  ಬರುವಂತದ್ದು, ಸುಮ್ನೆ ಬರೋದಿಲ್ಲ ಅನ್ನೋದು ಅಷ್ಟುವರ್ಷದ ಅನುಭವದಿಂದ ತಿಳಿದಿತ್ತು. ಆದ್ರೆ ಇಂದು ಯಾಕೆ ಬಂದಿತ್ತು ಅದೂ ಧುತ್ತೆಂದು ?? ಕೂಡಲೇ ಮನಸ್ಸಿಗೆ ಹೊಳೆದಿದ್ದು ಆಮ್ಲಜನಕದ ಕೊರತೆಯಿಂದ ತಲೆ ನೋವು ಬಂದಿರಬಹುದು. ಇದು ಅನ್ನಿಸಿದ ಕೂಡಲೇ ಎ ಸಿ ಯ ಕಿಂಡಿ ಕಡೆ  ಕೈ  ಹಿಡಿದು ಪರೀಕ್ಷಿಸಿದರೆ ತುಂಬಾ ಸ್ಲೋ .. ಇತ್ತು . ಸರಿ... ಈ ನನ್ನ  ತಲೆ ನೋವನ್ನು ಪರಾರಿಯಾಗೋ ಹಾಗೆ  ಮಾಡಿದ್ದೆ ದರ್ಬಾರಿ ಕಾನಡ ರಾಗ ! ಅದನ್ನೇ ಮೊಬೈಲಿನಲ್ಲಿ ಇಯರ್ ಫೋನ್  ಮೂಲಕ ಕೇಳಿದೆ ಸುಮಾರು ೧೦ -೧೫ ನಿಮಿಷ ಉಹು ಏನು ಉಪಯೋಗ ಕಾಣಲಿಲ್ಲ.. ಮುಂದಿನ ಹಂತ binaural beats ಕೇಳಿದೆ . ಏನು ಪ್ರಯೋಜನ ಇಲ್ಲ . ನಾನೇ ಒಯಿದಿದ್ದ ನೀರು ಖಾಲಿ ಮಾಡಿದೆ ಏನು ಮಾಡಿದರೂ ತಲೆ ಮೇಲೆ ಮದ್ದಳೆ  ಬಾರಿಸಿದ ಅನುಭವ!!   ಇಸ್ಟೆಲ್ಲಾ ಅದಾಗ ಕಣ್ಣೆಲ್ಲ ಕತ್ತಲು  ಕತ್ತಲು . ತಲೆ ಸುತ್ತಿದಂತೆ, ಪ್ರಜ್ಞೆ ತಪ್ಪುತ್ತಿದೆ  ಅನ್ನಿಸೋಕೆ ಶುರು ! ಏನು ಮಾಡೋದು?? ಒಂದು ಸಖಿಯರೂ ಕಾಣುತ್ತಿಲ್ಲ .. ನನ್ನ ದುರಾ ದೃಷ್ಟವೇ ಸೈ ನನ್ನಂತೆ ಒಂಟಿಯಾಗಿ  ಪ್ರಯಾಣ ಮಾಡುವ ಹುಡುಗಿ/ ಮಹಿಳೆ  ಇರಲೇ ಇಲ್ಲ. ನನ್ನ ಪಕ್ಕ ಕೂತ ಬಸವಗಳು  ನಿದ್ರಾದೇವಿ ವಶ !! ಏನು ಮಾಡೋದು ಹಾಗೆ ವಾಲೀ ಕೊಂಡು ಮುಂಭಾಗಕ್ಕೆ ಬಂದು ಅಲ್ಲಿಯೇ ಇದ್ದ ಗಗನ ಸಖಿಯನ್ನು ಕೇಳಿ  ನೀರಿನ ಬಾಟಲ್ ಪಡೆದು ಕೊಂಡು ೨೦೦ ಮಿಲಿ  ತಂಪಾದ ನೀರು ಕುಡಿದೆ . ಆಮೇಲೆ ಮುಖ ತೊಳೆದು ಎರಡು ನಿಮಿಷ ಸುಧಾರಿಸಿ ಕೊಂಡೆ .
      ಆ ಪುಣ್ಯಾತ್ಮ ಗಿತ್ತಿ  ಏನಾಗುತ್ತಿದೆ ಎಂದೂ  ಕೇಳಲಿಲ್ಲ. ೫ ನಿಮಿಷ ಕಳೆದರು ನಾನು ಕದಲದೆ ಇದ್ದಿದ್ದು  ನೋಡಿ , ಮೇಡಂ ದಯಮಾಡಿ ನಿಮ್ಮ ಸೀಟ್ ನಲ್ಲಿ ಹೋಗಿ ಕೂತು ಕೊಳ್ಳಿ , ಇಲ್ಲಿ ನಿಲ್ಲಬೇಡಿ ಅಂದು ಬಿಟ್ಟಳು. ನಂಗೆ ಕೋಪ ನೆತ್ತಿಗೆ ಏರಿತು ೩೦ ನಿಮಿಷ ಅಂದು ಘ೦ಟೆ ಒಂದು ಅದಾಗಲೇ ದಾಟಿತ್ತು . ನಂಗೆ ಪ್ರಾಣ ಹೋಗೋವಷ್ಟು ತಲೆ ನೋವು ಆಗ್ತಾ ಇದೆ ಎ.ಸಿ ಬೇರೆ ಆಫ್  ಮಾಡಿ ಅರ್ಧ  ಘ೦ಟೆ ಕಳೆದಿತ್ತು.  ಸರಿಯಾಗಿ ತರಾಟೆಗೆ ತೆಗೆದು ಕೊಂಡೆ . ನಾನು ನನ್ನ  ಸೀಟ್ ಗೆ ಹೋಗಿ  ಕೂರೋದಿಲ್ಲ.. ನನ್ನ  ಪ್ರಾಣ ಹೋಗ್ತಾ ಇದೆ. ಅಲ್ಲಿ ಹೋಗಿ ಕೂತರೆ ಇನ್ನು ಸ್ವಲ್ಪ ಹೊತ್ತಿಗೆ ಅಂಬುಲೆನ್ಸ್  ತರಿಸಬೇಕು ಅಷ್ಟೇ ನೀವು ...ನಾನು  ಇಲ್ಲಿಂದ  ಸೀದಾ ಹೊರಗೆ ಗಾಳಿಗೆ ಹೋಗಿ ಕೂತು ಬಿಡೋದೇ ಸೈ ಅದೇನು ಮಾಡಿ ಕೊಳ್ತೀರೋ ಮಾಡಿ ಕೊಳ್ಳಿ  ಅಂತ ದಬಾಯಿಸಿ ಹೊರಗೆ ಬಂದು ಮೆಟ್ಟಿಲಿನಲ್ಲೇ ಒಂದು ಬದಿಯಲ್ಲಿ ಬೆಕ್ಕಿನಂತೆ ಮುದುರಿ ಕೂತೆ . ಅಯ್ಯಬ್ಬ!!! ಹೊರಗೆ ಎಷ್ಟು ಪ್ರಶಾಂತ ವಾತಾವರಣ, ಗಾಳಿ ತಂಪು ತಂಪು ಕೂಲ್ ಕೂಲ್ . .... ಸೂರ್ಯೋದಯದ ಸೊಬಗು..  ಬಾನಂಗಳದ ಮೆರುಗು .


     ಸಮಯ ಸುಮಾರು ೫.೩೦ . ಹತ್ತೇ ನಿಮಿಷದಲ್ಲಿ ಚೇತರಿಸಿ ಕೊಂಡು ನನ್ನ ಮನೆದೇವರಿಗೆ ಫೋನ್ ಮಾಡಿದೆ. ಆಗಷ್ಟೇ ಕಣ್ಣು ಬಿಟ್ಟ ಕುಂಭ ಕರ್ಣ .. "ಅಷ್ಟು ಬೇಗ ಊರಿಗೆ ಹೋದೆಯಾ ?" ಅಂದಾಗ ನಂಗೆ ನಗೋದ ಅಳೋದ ಅಂತ ಗಲಿ ಬಿಲಿ .ಸಾವರಿಸಿ ಕೊಂಡು ಆದ ಅವಾಂತರ  ಹೇಳಿ ,  ನಾನು ಊರಿಗೆ ತಲುಪೋದು ತಡವಾಗುತ್ತೆ . ಅಮ್ಮನಿಗೆ ಫೋನ್ ಮಾಡಿ ಹೇಳು ಅವರು ಅಲ್ಲಿ ಬಂದು ಕಾಯೋದು ಬೇಡ ಅ೦ತ  ಹೇಳಿದೆ. ನಂಗೆ ಹೇಳಬಹುದಿತ್ತು , ನನ್ನ ಅಮ್ಮ ಸಿಕ್ಕಾಪಟ್ಟೆ ಸೂಕ್ಷ್ಮ ಗ್ರಾಹಿ ಒಂದಿಷ್ಟು ಧ್ವನಿ ವ್ಯತ್ಯಾಸ ಆದರು ಗ್ರಹಿಸ ಬಲ್ಲ ಮಾತೆ ! ನಾನು ಹೇಳಿ ಅವರು ಗಾಬರಿ ಬೀಳೋದು ಬೇಡ ಅಂತ ಈ ನಿರ್ಧಾರ ಮಾಡಿದೆ. ನಾನು ಇನ್ನೊಮ್ಮೆ ಕರೆ ಮಾಡುವವರೆಗೆ ಹೊರಡೋದು ಬೇಡ ಅಂದು ಬಿಡು ಅಂತ ತಿಳಿಸಿ ಕೂತೆ.
      ಇತ್ತಕಡೆ ಇಂದ ಸುಮಾರು ೧೬೦- ೧೭೦ ಪ್ರಯಾಣಿಕರ ಹಾಹಾಕಾರ ನೀರಿಗಾಗಿ ಗಾಳಿಗಾಗಿ !  ಅಂದೊಂದು ತರಾ ಕಾನ್ಸಂಟ್ರೇಶನ್ ಕ್ಯಾಂಪ್ ನಲ್ಲಿ ಕೂಡಿ ಹಾಕಿದ  ಅನುಭವ . ಒಳಗೆ ಪುಟ್ಟ ಪುಟ್ಟ ಮಕ್ಕಳ ಆಕ್ರಂದನ, ಅಳು . ಕೆಲವರು ಪ್ರಯಾಣಿಕರು ಅಲ್ಲೇ ಸಿಕ್ಕ ಗಗನ ಸಖ ರನ್ನು ತರಾಟೆಗೆ ತೆಗೆದು ಕೊಂಡು ವ್ಯರ್ಥ ಜಗಳ ಶುರು ಮಾಡಿದ್ದರು . ನಾನು ಎದ್ದು ಬಂದಿದ್ದೇ ತಡ ಎಲ್ಲ ದಂಡಿಯಾಗಿ ಎದ್ದು ಬಂದರು. ಬಂದು ಸುಮ್ಮನೆ ಶುಭ್ರ ವಾತಾವರಣದ ಗಾಳಿ ಸೇವನೆ ಮಾಡಿ , ಪ್ರಕೃತಿ ಸೊಬಗನ್ನು ಆನಂದಿಸುತ್ತಾ  ಇರಬಹುದಿತ್ತು, ಅದು ಬಿಟ್ಟು  ಅಲ್ಲಿ ಇದ್ದ ಗಗನ ಸಖಿಯರ ಜೊತೆ ಜಗಳ ಕಾಯಲು ಶುರು ಮಾಡಿದರು. ನನಗಂತೂ  ಕಾಗೆಗಳ ಲೋಕದಲ್ಲಿ ಹುಟ್ಟಿದ ಅನುಭವ!! ನಾವು  ಏನೇ ಜಗಳ ಕಾದರೂ ತಾಂತ್ರಿಕ ದೋಷ ನಿವಾರಣೆ ಆಗೊವರೆಗೆ ವಿಮಾನ ಹೊರಡೊಲ್ಲ  ಅನ್ನೋ ಸಾಮಾನ್ಯ ಜ್ಞಾನ ಕೂಡ ಇಲ್ಲದೆ ಹೋಯಿತಲ್ಲ ಈ ಹುಲುಮಾನವರಿಗೆ ಅಂತ ವಿಷದ ಭಾವ ಮನದಲ್ಲಿ. ಇವರ ಗಲಾಟೆ ನಿಯಂತ್ರಿಸಲು ೨- ೩ ಜನ ಸೆಕ್ಯೂರಿಟಿ ಯವರು ಧಾವಿಸಿದರು. ಅವರು ಬಂದು ಮಾಡಿದ್ದು  ಏನು ಎಲ್ಲರನ್ನು ಒಳಗೆ ಆಟ್ಟಿದರು. ಆದರೆ ನಾನು ಮಾತ್ರ ಮೆಟ್ಟಿಲಲ್ಲೇ ಭದ್ರವಾಗಿ ಕೂತಿದ್ದೆ. ಅದ್ರಲ್ಲಿ ಒಬ್ಬ "ಮೇಡಂ  ಎಲ್ಲ ಒಳಗೆ ಹೋದರು ನೀವೂ  ಹೋಗಿ" ಅಂದ , ನಾನು ನಸು ನಗುವಿನಲ್ಲೇ ಕೇಳಿದೆ "ನಾನು ಇಲ್ಲಿ ಕೂತಿದ್ದರೆ ನಿಮ್ಮ ರಿಪೇರಿ ಕೆಲಸಕ್ಕೆ ತೊಂದ್ರೆ ಆಗುತ್ತಾ??  ಒಳಗೆ ಎಷ್ಟು ಜನ ಸೆಕೆಯಲಿ ನರಳ್ತಾ ಇದ್ದಾರೆ  ಒಳಗೆ  ಎ ಸಿ ಕೂಡ ಇಲ್ಲ . ಸಧ್ಯಕ್ಕೆ ಒಂದು  ತಾತ್ಕಾಲಿಕ external A.C  ಅಳವಡಿಸುವ ವ್ಯವಸ್ಥೆ  ಮಾಡಿ, ಇಲ್ಲವಾದಲ್ಲಿ ಇನ್ನು ಅರ್ಧ ಘ೦ಟೆಯಲ್ಲಿ  ಅಂಬುಲೆನ್ಸ್ ಬೇಕು ಅಂತ ನಿಮಗೆ ಫೋನ್ ಬರುತ್ತೆ ಅದು ಬೇಕಾ ನಿಮಗೆ ?" ಅವನಲ್ಲಿ ಉತ್ತರ ಇಲ್ಲ ಏನು ಹೇಳದೆ ಸುಮ್ಮನೆ ಹೋದ.  ಸ್ವಲ್ಪ ಹೊತ್ತಿಗೆ A.C.  ಹೊತ್ತ ವಾಹನ ಬಂತು, ಅಂತು ವಿಮಾನಕ್ಕೊಂದು ಬದಲಿ ಎ ಸಿ ವ್ಯವಸ್ಥೆ ಆಗಿ   ಸಾವರಿಸಿ ಕೊಂಡ  ಜನ ಸ್ವಲ್ಪ ಶಾಂತರಾದರು . ನಾನು ಕೂತ ಮೆಟ್ಟಿಲಿಂದ ಕದಲಲೇ ಇಲ್ಲ .

       ಸುಮಾರು ಐದುವರ್ಷ ಗಳಲ್ಲಿ ಹಲವು ವಿಮಾನ ಯಾನದಲ್ಲಿ  ಕಂಡ ಗಗನ ಸಖಿಯರ ಬದುಕು ಎಷ್ಟು ಸುಖಮಯ ಅಂತ ಭಾವಿಸಿದ್ದ ನಂಗೆ ಅವರ ನಿಜ ಬದುಕಿನ ಚಿತ್ರಣ ಅಂದು ಸಿಕ್ಕಿತು. ೨ ಮೂರು ಸಲ ಬಂದು ನೀರು ಕೇಳಿ ಕೇಳಿ ಕುಡಿಯೋಕೆ ಬಂದಾಗ ಸ್ವಲ್ಪ ಮಾತನಾಡಿಸಿದೆ , ಅಮೃತ ಸರ ದಿಂದ ದುಬಾಯಿ, ದುಬೈ ಇಂದ ಮಂಗಳೂರು ಅದೂ ದಿನಕೂಲಿಗೆ !  ಅದೂ ಇಂತ ರಗಳೆ ರಾಮಾಯಣದ ಕೇರಳದ ಕುಟ್ಟಿಗಳು  ಭಗವಂತಾ !!ಆ ಸಖಿಯರಿಬ್ಬರ ಬೆವರು ಇಳಿಸಿಯೇ ಬಿಟ್ಟಿದ್ರು. ಯಾರ ಮೇಲಿನ ಅಕ್ರೋಶ ಇನ್ಯಾರ ಮೇಲೋ !!! ತಾಂತ್ರಿಕ ದೋಷ ಸರಿ ಪಡಿಸ ಬೇಕಿರೋದು ಯಾರು? ತಾಂತ್ರಿಕ ವ್ಯವಸ್ಥೆ ಪರಿಶೀಲಿಸದೆ ಪ್ರಯಾಣಿಕರನ್ನು ಹತ್ತಿಸಿದ್ದು ,ಕೂಡಿ ಹಾಕಿದ್ದು ಯಾರೋ? ಕೊನೆ ಪಕ್ಷ ಎಲ್ಲ ಪ್ರಯಾಣಿಕರನ್ನು ಮತ್ತೆ ಏರ್ಪೋರ್ಟ್ ಗೆ ಆದರೂ ಒಯ್ದು ಬಿಡಬಹುದಿತ್ತು . ಅದು ಮಾಡಲಿಲ್ಲ.. ಇದನ್ನೆಲ್ಲಾ ಯಾರ ಬಳಿ ಹೇಳೋದು.. ?? ಉತ್ತರಿಸುವವರಾರು..
    ಬೇರೆ ಏರ್ ಪೋರ್ಟ್ ಕತೆ ಗೊತ್ತಿಲ್ಲ ನಂಗೆ ಆದರೆ ದುಬೈ ಏರ್ ಪೋರ್ಟ್ನಲ್ಲಿ ನಿಗದಿತ ಸಮಯಕ್ಕಿಂತ ಜಾಸ್ತಿ ಹೊತ್ತು ವಿಮಾನ ತಂಗಿದರೆ ಏರ್ ಪೋರ್ಟ್ ಗೆ ತೆರಿಗೆ ಪಾವತಿಸ ಬೇಕು. ಹೀಗಿರುವಾಗ ಅವರು ಪ್ರಯಾಣಿಕರ ಸೌಖ್ಯ  ಎಲ್ಲಿ ನೋಡಿಯಾರು ? ಎ ಸಿ  ಇಲ್ಲದೇ  ಒದ್ದಾಡಿದರೆ ಒದ್ದಾಡಲಿ ,  ಎ ಸಿ ಹಾಕಿದರೆ ಇಂಧನ ವ್ಯಯ ! ಕುರಿಗಳು ಸುಮ್ಮನಿದ್ದರೆ ಸುಮ್ಮನೆ ಇದ್ದು ಬಿಡಲಿ ಅನ್ನೋ ಧೋರಣೆ. ಕೋಣನ ನೋವು ಕಾಗೆಗೆ ಏನು ಗೊತ್ತು..  ಈ ಸಖಿಯರೂ ಸಖರೂ ಬಾಗಿಲಲ್ಲೇ  ಇದ್ದಕಾರಣ ಅವರಿಗೆ ಕಷ್ಟದ ಅರಿವು ಆಗಲಿಲ್ಲ. ಪೈಲಟ್ ಅಂತೂ ತಣ್ಣಗೆ ಕೂತಿದ್ದಳು  ಅವಳ  ಕ್ಯಾಬಿನ್ ಎ. ಸಿ . ಆಫ್ ಆಗಿರಲೇ ಇಲ್ಲ . ಇದು ನನಗೆ ಹೇಗೆ ತಿಳೀತು ನಂಗೆ ಅಂತ ಕೇಳುವಿರಾ ? ನಾನು  ನೀರಿಗಾಗಿ ಆಗಾಗ ಓಡಿ  ವಿಮಾನದ ಒಳಗೆ ಬರುವಾಗ  ಒಂದು ಸಲ ಅನುಭವ ಕ್ಕೆ ಬಂತು.  ಏನೇ ಆದರೂ ಏನೂ ಮಾಡುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ನೀರಡಿಕೆ ಹಸಿವಿನಲ್ಲಿ ಬಳಲಿ ಬೆಂಡಾಗಿದ್ದೆ. ನನ್ನ ತಂಟೆಗೆ ಯಾರು ಬರದಂತೆ ನಿಭಾಯಿಸಿ ಕೊಂಡೆ ಅಷ್ಟೇ. ವಿಮಾನದಲ್ಲಿ ಕೊಡಬೇಕಿದ್ದ ಆಹಾರವನ್ನು ಕೊಡಲಿಲ್ಲ ಆ ದಿನ  ನಂಗೆ ಹಸಿವೆಯಲ್ಲಿ ಪ್ರಾಣ ಹೋಗುತ್ತಿತ್ತು ರಾತ್ರಿ ನಿದ್ರೆ ಕೆಟ್ಟರೆ ಮಾರನೆ ದಿನ ಬಕಾಸುರನಂತೆ ತಿನ್ನೋದು ನಾನು.. ಆದರೆ ಇಂದು ಏನನ್ನು  ತಿನ್ನೋದು? ಯಾರನ್ನು ತಿನ್ನೋದು? ಹಸಿವೆ ತಾಳಲಾರದೇ ಬೆಳಗ್ಗೆ ಏಳು ಘಂಟೆ ಸುಮಾರಿಗೆ  ಆ ಗಗನ ಸಖಿ ಯನ್ನು ಕೇಳಿ ಒಂದು ೨ slice ಬ್ರೆಡ್ ತಿಂದೆ . ಉಳಿದಿದ್ದು ಯಾವುದು ತಿಂದರೂ ಹೊಟ್ಟೆ ಸರಿ ಉಳಿಯುವ ಭರವಸೆ ಇರಲಿಲ್ಲ . ಯಾವಾಗಲೂ ವ್ಯಾನಿಟಿ ಬ್ಯಾಗ್ ನಲ್ಲಿ ಹಣ್ಣು  ಹಂಪಲು ಒಯ್ಯುವ ನಾನು ಈ ಬಾರಿ ಏನು ಹೊತ್ತೊಯ್ದಿರಲಿಲ್ಲ .
   ಅಂತೂ ೭.೪೫ ರ ಸುಮಾರಿಗೆ ದುರಸ್ತಿ ಕಾರ್ಯ ಮುಗಿದು ವಿಮಾನ ಹಾರುವುದು ಅಂತ ಪ್ರಕಟಣೆ ! ಉಸ್ಸಪ್ಪಾ  ಸುಮಾರು ಮೂರು ಮುಕ್ಕಾಲು ಘಂಟೆಯ ಸುದೀರ್ಘ  ದುರಸ್ತಿಯ ಬಳಿಕ ವಿಮಾನ  ಹಾರೋಕೆ ಸಿದ್ದವಾಗಿತ್ತು. ದುರಸ್ತಿಮಾಡುವ ಜನ ಅಲಿಂದ ಕದಲಿದ ಮೇಲೆ ನಾನು ವಿಮಾನದ ಒಳಗೆ ಬಂದೆ . ಎದುರಲ್ಲೇ ಸಿಕ್ಕ ಸೀಟ್ ನಲ್ಲೇ ಕೂತು ಬಿಟ್ಟೆ ಯಾರು ಅವರ ಅವರ ಸೀಟ್ ನಲ್ಲಿರಲೇ  ಇಲ್ಲ, ಪೂರ ಚಲ್ಲಾ ಪಿಲ್ಲಿ !! ಅ೦ತೂ  ಇಂತೂ ವಿಮಾನ ಹೊರಟಿತು.. ಎಂಟು ಘ೦ಟೆ ಸಮಯಕ್ಕೆ ಕಣ್ಣೆಲ್ಲ ಬಾಡಿ ಹೋಗಿ ನಿದ್ದೆ ಬಂತು. ಆದರೆ ಒಂದು ಕರ್ಕಶ ಸದ್ದು ಕೇಳಿ ಎಚ್ಚರವಾಯಿತು . ಕನಸೋ ಏನೋ ಎಂದು ಸುಮ್ಮನಾದೆ , ಉಹು ಅದು ಕನಸಲ್ಲ ಮತ್ತೆ ಐದೇ ನಿಮಿಷಕ್ಕೆ ಪುನರಾವರ್ತನೆ. ಮತ್ತೆ ಭಯ ಶುರುವಾಯಿತು . ಈಗ ಎಲ್ಲಾದರು ಹೊತ್ತು ಹಾಕ್ತಾರೆ . ಏನು ಮಾಡೋದು ಬದುಕಿದ್ರೆ ಬದುಕಿದೆ ಇಲ್ಲಾಂದ್ರೆ ಇಲ್ಲ ಅಷ್ಟೇ !!! ತಳಭಾಗದಿಂದ ಆ  ಕರ್ಕಶ ಸದ್ದು  ಕೇಳಿ ಬರ್ತಾ ಇತ್ತು. ಕೊನೆಗೆ ಒಮ್ಮೆ ವಿಮಾನ ಹೊಯ್ದಾಡಲು ಶುರು !! ಸೀಟ್ ಬೆಲ್ಟ್ ಹಾಕಿಕೊಳ್ಳಿ ಅನ್ನೋ ಸೂಚನೆ ಬೇರೆ ! ಇದನ್ನೆನೋಡಿ ಆ ಕ್ಷಣಕ್ಕೆ ನನ್ನ ಕೋತಿ ಬುದ್ದಿಗೆ ನೆನಪಾದ ಹಾಡು ... ಕುಣಿಸಲು ನೀನು  ಕುಣಿಯುವೆ ನಾನು ,ನಾನೊಂದು ಗೊಂಬೆಯೂ ನೀ ಸೂತ್ರಧಾರಿ ... ನಿನ್ನ ಎದಿರು ನಾ ಪಾತ್ರಧಾರಿ...  ಅ೦ತೂ  ಕೊನೆಗೆ ನಿಗದಿತ ಮೂರು ಘ೦ಟೆ ಅಂದು  ನಾಲ್ಕು ಘ೦ಟೆ ಕಳೆದು ಮಂಗಳೂರು ತಲುಪಿತು . ಅಲ್ಲಿಂದ ಇಳಿದು ಪ್ರಕ್ರಿಯೆಗಳನ್ನು ಮುಗಿಸಿ ಕೊಂಡು  ಬಂದು ನನ್ನ ಬ್ಯಾಗ್ ಕಲೆಕ್ಟ್ ಮಾಡಿ ಅಮ್ಮನ ಮಡಿಲು ಸೇರುವಾಗ ೨ ಘಂಟೆ :)  ಮನೆಗೆ ಬಂದು ತಲುಪುವಾಗ  ಇಳಿ ಹಗಲು ೩ ಘಂಟೆ.
 ಪುಣ್ಯಕ್ಕೆ ಹಾರಾಟದ ನಡುವೆ ತಾಂತ್ರಿಕ  ದೋಷ ಬರದೆ ಮೊದಲೇ ಬಂದುದರಿಂದ ಆಗೋ ಅವಾಂತರ ತಪ್ಪಿತು ಅನ್ನೋ ಆಶಾ ಭಾವ ... ಇನ್ನು ಏನೇನು ಅನುಭವಿಸೋಕೆ ಇದೆಯೋ ಅಲ್ಲಿವರೆಗೆ ಏನೂ ಆಗೋಲ್ಲ ಅನ್ನೋ ಮಾತು ನಿಜ ಅನ್ನಿಸ್ತು 
     ಈ ಅನುಭವ ನಿಜಕ್ಕೂ ಮರೆಯಲಾಗದ ಅನುಭವ !!!  






6 comments:

Srinidhi Rao said...

:)

ಪ್ರಕಾಶ್ ಶ್ರೀನಿವಾಸ್ said...

ಅಬ್ಬ ಎಂತಹ ಥ್ರಿಲ್ ಅಕ್ಕ ಬದುಕಿನಲ್ಲಿ ಎಂದೂ ಮರೆಯಲಾಗದ ಅನುಭವ ...
ನಮಗೂ ನಿಮ್ಮ ಜೊತೆಯೇ ಇದ್ದು ನೋಡುವ ಹಾಗೆ ನೈಜವಾಗಿ ಬರಹದಲ್ಲಿ ಮೂಡಿಸಿ ಕೊಟ್ಟಿದಕ್ಕೆ ವಂದನೆಗಳು ..ನಿಮ್ಮಿಂದ ಮತ್ತಷ್ಟು ಇಂತಹ ಬರಹಗಳು ಬರುತ್ತಲೇ ಇರಲಿ ....
ಶುಭವಾಗಲಿ ಅಕ್ಕ ..............

Srinidhi Rao said...

ಓದುಗನ ಎದೆಯಲ್ಲೂ ಅದೇ ಭಾವ ಮೂಡಿಸುವ ಶಕ್ತಿ ನಿಮ್ಮ ಪದಗಳಿಗಿದೆ ರೀ ನಿಮ್ಮ ಬರಹದ ರೀತಿಗೆ ಸಾವಿರ ಲೈಕುಗಳು ( ನೀವು ಪಟ್ಟ ದುರವಸ್ಥೆಗಲ್ಲ)-ಗುರುಪ್ರಸಾದ್ ಆಚಾರ್ಯ .

Srinidhi Rao said...

Padmapani Jodidar srinidhi madam,nimma barahakke maaru hode naadaroo nimma paristhithi odi pechhaade.Heege bareethaa iri,aadare inthaha prasangagalu baarade irali.

Srinidhi Rao said...

Srinidhi Tk ಓದುತ್ತಿದ್ದೇನೆ...ಎ೦ಬುದೇ ಮರೆತು ನಿಮ್ಮೊಡನೆ ಅಲ್ಲೇ ಪಾಲುದಾರನಾದ ಅನುಭವ.
ಸು೦ದರ ಬರಹ.ಯಾವುದೇ ಸನ್ನಿವೇಶವನ್ನೂ ಸಕಾರಾತ್ಮಕವಾಗಿ ನೋಡಬೇಕೆ೦ದರೆ --
ಈ ಬರಹ ಹುಟ್ಟು ಹಾಕಿದ ಆ ಘಟನೆ ಒ೦ದು ಉದಾಹರಣೆ.

Anonymous said...

ನಿನ್ನ ಲೇಖನ ಎಷ್ಟು ಪರಿಣಾಮ ಕಾರಿಯಾಗಿದೆ ಅನ್ನೋದಿಕ್ಕೆ ಇಲ್ಲಿ ಎಲ್ಲರ ಕಾಮೆಂಟ್ಸ್ ಸಾಕ್ಷಿ .. ಅವರು ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದಾರೆ .. ನಿಜವಾಗ್ಲೂ ಓದೋದಿಕ್ಕೆ ಎಗ್ಸೈಟಿಂಗ್ ಆಗಿತ್ತು .. A ಕ್ಲಾಸ್ ಲೇಖನ ಶ್ರೀ .. ಈ ತರದ ಲೇಖನಗಳಿಗೆ ನಾ ಯಾವಾಗಲೂ ಕಾಯುತ್ತಿರುವೆ ..
Aparna.