Sunday, March 24, 2013

ಮಂಜುವಿನ ಉತ್ತರ ಕಾಲ --- 2 ಚಿನ್ನುನ ಎಂಟ್ರಿ !!

 ಕರಿಯ ಅಸುನೀಗಿದ ಬಳಿಕ ನಂಗೆ ಇನ್ನು ಬೆಕ್ಕು ಸಾಕುವ ಸಾಹಸವೇ ಬೇಡ ಅಂತ ಕೂತು ಬಿಟ್ಟೆ. ಆದರೆ ನಂಗೆ ಆಟ ಆಡೋಕೆ ಯಾರೂ ಜೊತೆಗೆ ಇರ್ಲಿಲ್ಲ . ಪಕ್ಕ ಮನೆಯ ಮಕ್ಕಳು ನನ್ನನ್ನು ಆಟಕ್ಕೆ ಸೇರಿಸಿ ಕೊಂಡರೆ ಕೊಂಡರು ಇಲ್ಲಾಂದ್ರೆ ಇಲ್ಲ. ಯಾಕೆ ಅಂದ್ರೆ ನಾನು ಒಂದು ಮಗು ನನ್ನ  ಪಕ್ಕದ  ಮನೆಯವರಿಗೆ ಎಲ್ಲರಿಗೂ ಅಕ್ಕನೋ ತಂಗಿಯೋ ಇರುತ್ತಿದ್ದರು . ನಾನೊಂದು ಒಂಟಿ ಗೂಬೆ . ಹೀಗಾಗಿ ನಾನು ಆಯ್ದು ಕೊಂಡಿದ್ದು ಬೆಕ್ಕನ್ನು ! ಈ ಬೆಕ್ಕುಗಳ  ಅಗಲಿಕೆ ನನ್ನನ್ನು ಮಾನಸಿಕವಾಗಿ ತುಂಬಾ ಅಧೀರಳನ್ನಾಗಿ ಮಾಡಿದುವು. ಹೀಗೆ ಮಾತನಾಡೋವಾಗ ಅತ್ತೆ ಜೊತೆ ಹೇಳಿದ್ದೆ . ನಿಮ್ಮ ಅಮ್ಮನ ಮನೆಯಲ್ಲಿ ಆದರೂ ಮಂಜು  ಬೆಕ್ಕಿನ ಬಣ್ಣದ ಬೆಕ್ಕಿ ಇದ್ದರೆ ಬೇಕು ಅಂತ. ಎಲ್ಲಾದರು ನೋಡೋಕೆ ಸಿಕ್ಕರೆ ತೊಗೊಂಡು ಬರುವೆ ಅಂತ ಹೇಳಿ ಸುಮ್ಮನಾಗಿ ಕೆಲವು ಕಾಲವೇ ಕಳೆದಿತ್ತು.    
      ಅದೊಂದು ದಿನ ಸಂಜೆ  ಮಂಜು ಬೆಕ್ಕಿನ ಹೊನ್ನ ಬಣ್ಣದ ೪ ಮರಿ ತಂದು ಕೊಟ್ರು , ಅವರು ಸ್ಕೂಲ್ ಟೀಚರ್ ಅವರ ಶಾಲೆ  ಬಳಿ  ಯಾರೋ ಬಿಟ್ಟು ಹೋಗಿದ್ರು ಅಂತೆ. ಇನ್ನು ಈ ಮರಿಗಳು ವಾಹನದ ಅಡಿಗೆ ಬೀಳೋದು ಬೇಡ ಅಂತ ಮಧ್ಯಾನ್ಹವೇ ತಂದು ಅವಕ್ಕೆ ಊಟ ಹಾಕಿ ಸ್ಟಾಫ್ ರೂಂ ನಲ್ಲಿ ಇಟ್ಟು  ಜೋಪಾನ ಮಾಡಿ  ತಂದು ಸಂಜೆ ಮನೆ ಸೇರಿಸಿದರು .  ಅಯ್ಯಬ್ಬಾ  ೪ ಮರಿ ನೋಡಿ ತಲೆ ತಿರುಗಿ ನಾನು ಬೀಳುವುದು ಒಂದು ಬಾಕಿ ! ಅಯ್ಯೋ ಪುಟ್ಟ ಪುಟ್ಟ ಪಿಳ್ಳೆ ಮರಿಗಳು , ಮುದ್ದು ಮುದ್ದಾಗಿದ್ದವು.  ಈಗ ೪ ಮರಿಗಳನ್ನು ಪಾಲನೆ ಹೇಗೆ ಮಾಡೋದು ಅಂತ ನನಗೂ ನನ್ನ ಅಮ್ಮನಿಗೂ ಚಿಂತೆ ! ಇಷ್ಟಾದಾಗ ಅತ್ತೆ ಹೇಳಿದ್ರು ೧೫ ದಿನ ನೋಡಿ ಕೊಳ್ಳಿ  ಆಮೇಲೆ ಈ ಬೆಕ್ಕಿನ ಮರಿಗಳ ಪಾಲು ಪಟ್ಟಿ ಆಗೋದು ಇದೆ ಅಂತ . ೨ ಮರಿ ನನ್ನ ತಂಗಿಗೆ ೧ ಮರಿ ನನ್ನ ಚಿಕ್ಕಮ್ಮನಿಗೆ ಬೇಕು ಅಲ್ಲಿಗೆ ನಿಮಗೆ ಉಳಿಯೋದು ೧ ಮರಿ ಮಾತ್ರ ! ಅಲ್ಲಿವರೆಗೆ  ಒಂದೇ ಕಡೆ ಇರಲಿ ಪಾಪದ ಮರಿಗಳು ಅಂದ್ರು . 
      ಅಲ್ಲಿಂದ ಶುರು ನಮ್ಮ ಬೇಬಿ ಸಿಟ್ಟಿಂಗ್ ! ಅವು ಎಷ್ಟು  ಪುಟ್ಟ ಮರಿಗಳು ಅಂದ್ರೆ ಅವಕ್ಕೆ  ತಟ್ಟೆಯಲ್ಲಿ ಇಟ್ಟ ಹಾಲು ಸರಿ ಕುಡಿಯೋಕೆ ಬರ್ತಾ ಇರಲಿಲ್ಲ, ತಟ್ಟೆಯಲ್ಲಿ ಇಟ್ಟ ಅನ್ನ  ತಿನ್ನೋಕೂ ಬರದೆ ಒದ್ದಾಡುತ್ತಿದ್ದವು . ತಟ್ಟೆಯಲ್ಲಿ ಹಾಲು ಇಟ್ಟರೆ ೪ ಜನ ಒಟ್ಟಿಗೆ ಮುತ್ತಿಗೆ ಹಾಕಿ, ಕಾಲು ಹಾಕಿ ಹಾಲು ಚೆಲ್ಲಿ ಹೋಗುತ್ತಿತ್ತು. ನೆಲದಲ್ಲಿ ಬಿದ್ದ ಹಾಲು ನೆಕ್ಕೂದಕ್ಕೆ  ಶುರು  ನಂಗೂ ನನ್ನ ಅಮ್ಮನಿಗೂ ನೆಲದಲ್ಲಿ ಯಾವ ಪ್ರಾಣಿಗೂ ಆಹಾರ ಹಾಕುವ ರೂಢಿಯೇ  ಇಲ್ಲ.  ಹೀಗಾಗಿ ನೆಲಕ್ಕೆ  ಬಿದ್ದ ಹಾಲು ನೆಕ್ಕೋಕೆ ಪುಟ್ಟ ಮರಿಗಳಿಗೆ ಆಸ್ಪದ ಇರಲಿಲ್ಲ. ಮತ್ತೆ ತಟ್ಟೆಯಲ್ಲಿ  ಹೊಸ  ಹಾಲು ಇಡುವುದು , ಈ ಮರಿಗಳು ಕವಚಿ ಹಾಕುವುದು , ಇದು ಆಗಲ್ಲ ಅಂತ ೪ ಒಂದೇ ರೀತಿಯ ತಟ್ಟೆಗಳನ್ನು ಅಟ್ಟದ ಮೇಲೆ ಹೋಗಿ ಹುಡುಕಿ ತಂದು ಇಟ್ಟು ಪ್ರಯತ್ನಿಸಿದೆವು . ಆದರೋ ಕವಚಿ ಹಾಕ್ತಾ ಇದ್ದವು  ನಾನು  ಕೆಲವು ಬಾರಿ ಚಮಚ ದಲ್ಲಿ ಹಾಲು ಕುಡಿಸ್ತಾ ಇದ್ದೆ . ಅಂತೂ ಇಂತು ೪ ದಿನಕ್ಕೆ ಹಾಲು ಕುಡಿಯೋಕೆ ಕಲಿತುವು. ಅನ್ನ  ಅಂತೂ ತಿನ್ನೋ ಅವಸ್ಥೆ  ನೋಡಿ ಅಯ್ಯೋ ಅನ್ನಿಸುತ್ತಿತ್ತು ಒಂದು ಸಣ್ಣ ಬಟ್ಟಲಲ್ಲಿ ಅನ್ನ  ಇಟ್ಟರೆ ಅದನ್ನು ತಿನ್ನೋ  ಹೊತ್ತಿಗೆ ೪ ಮರಿಗಳು ಆ  ಬಟ್ಟಲಿನೊಳಗೆ ಸೇರಿ ಕೊಂಡು ಅನ್ನದ ಕಾಳನ್ನು ಹುಡುಕೋ ಪರಿಸ್ಥಿತಿ ತಂದು ಕೊಳ್ಳುತ್ತಿದ್ದವು. ಬೇರೆ ಬೇರೆ ತಟ್ಟೆಯಲ್ಲಿ ಇಟ್ಟರೂ  ಶಿಸ್ತಿನಲ್ಲಿ ತಿನ್ನುವುದು ಅವುಗಳಿಗೆ ಗೊತ್ತಿಲ್ಲ ! 
       ಇನ್ನು ಅವಕ್ಕೆ ಅವುಗಳ  ಅಮ್ಮನಿಂದ  ಪ್ರಾಥಮಿಕ ಹಂತದ ಸಾಮಾಜೀಕರಣವೂ  ಸರಿಯಾಗಿ ಆಗಿರಲಿಲ್ಲ . ಸಿಕ್ಕ ಸಿಕ್ಕ ಕಡೆಗಳಲ್ಲಿ ನೈಸರ್ಗಿಕ ಕರೆಗಳನ್ನು  ಮಾಡುತ್ತಿದ್ದವು. ಅಂತೂ ನನ್ನ ಅಮ್ಮ ಸುಮಾರಾಗಿ ಅದನ್ನು  ೧೦  ದಿನದ ಒಳಗೆ ಹಲವು ತಂತ್ರಗಳನ್ನು  ಬಳಸಿ ಕಲಿಸಿಕೊಟ್ಟರು.  ಅಂತೂ ೧೫ ದಿನಕ್ಕೆ ಸರಿಯಾಗಿ ೩ ಮರಿಗಳೂ ತಮ್ಮ ತಮ್ಮ ಸುಭದ್ರ ಜಾಗ ಸೇರಿ ಕೊಂಡವು. ಆಮೇಲೇ ನಮ್ಮ ಮನೆಯಲ್ಲಿ  ಉಳಿದುಕೊಂಡ ಒಬ್ಬಂಟಿ ಮರಿ ಚಿನ್ನು ! 
       ಅಯ್ಯೋ ಆ ದಿನ ಇಡೀ ರಾತ್ರಿ ತಾನೂ ಮಲಗಿಲ್ಲ ನಮ್ಮನ್ನೂ ಮಲಗೋಕೆ ಬಿಡಲೇ ಇಲ್ಲ . ಬರಿ ಮಿಯಾವ್ ಮಿಯಾವ್ ... ಉಯ್ ಉಯ್  ರಾಗ ತೆಗೀತ ಇದ್ದ . ಅಷ್ಟು ದಿನ ೪ ಮರಿಗಳೂ ಒಂದರ ಮೇಲೆ ಇನ್ನೊಂದು ಬಿದ್ದು ಕೊಂಡು ಒಂದು ಬುಟ್ಟಿಯಲ್ಲಿ ಮಲಗುತ್ತಿದ್ದವು . ಈವತ್ತು ಪಾಪದ ಚಿನ್ನು ಮರಿಗೆ ಯಾರೂ ಇಲ್ಲ . ಇರಲಿ ಎಂದು ನನ್ನ ಜೊತೆಗೆ ತಂದು ಮಲಗಿಸಿ ಕೊಂಡೆ . ತಾನು ಮಲಗಿಲ್ಲ ನನ್ನನೂ ಮಲಗೋಕೆ ಬಿಡಲಿಲ್ಲ. ಎಷ್ಟು  ಮೈ ನೇವರಿಸಿದರೂ ಅವ ಮಲಗಲೊಲ್ಲ ! ೨ -೩ ದಿನ ಹೀಗೆ  ಸಾಗಿದ ಮೇಲೆ ಹೊಂದಿಕೊಂಡ . ಬದುಕಿನಲ್ಲಿ ಹೊಂದಿಕೆ ಎಂಬುದು ಅನಿವಾರ್ಯ ಕೊನೆಯಲ್ಲಿ ಬುಟ್ಟಿಯಲ್ಲಿ ಒಬ್ಬನೇ ಮಲಗೋಕೆ ಪ್ರಾರಂಭ ! 
      ಚಿನ್ನುಗೆ ಅವನ ಕೈ ಉಗುರುಗಳನ್ನು ಒಳಗೆ ಮಡಿಸಿಕೊಳ್ಳೋಕೊ ಬರ್ತಾ ಇರಲಿಲ್ಲ. ಅದಕ್ಕೂ ಮುಂಚೆ ಅವನು ಅಮ್ಮನಿಂದ ದೂರ ಬಂದು ಬಿಟ್ಟಿದ್ದ .  ಅದನ್ನು ನಾನೆ ಕಳಿಸಿ ಕೊಟ್ಟೆ , ನಿಧಾನಕ್ಕೆ ಕಲಿತು ಕೊಂಡ. ಆದರೂ ಒಮ್ಮೊಮ್ಮೆ ಅವನಿಗೆ ಎಲ್ಲ ಜೊತೆಗಾರರ,  ಅಮ್ಮನ ನೆನಪು ಬಂದಾಗ ಸಿಕ್ಕ ಪಟ್ಟೆ  ವಿಚಿತ್ರವಾಗಿ  ಸಂದು ಸಂದುಗಳಿಗೆ ಓಡಿ ಮಿಯಾವ್ ಮಿಯಾವ್....  ಎಂದು ಕೂಗುತ್ತಿದ್ದ. ಏನೋ ಅಂತ ಎತ್ತಿಕೊಂಡು ಮುದ್ದಿಸಿದರೆ ದೈನ್ಯವಾಗಿ ನಮ್ಮ ಮುಖವನ್ನೇ ನೋಡುತ್ತಿದ್ದ. ಅವನಿಗೆ ಬೇಸರ ಕಳೆಯಲು ಒಂದು ಚಂಡು  ತಂದು  ಅದಕ್ಕೆ ಬಣ್ಣ ಬಣ್ಣದ ಬಟ್ಟೆಯ ತುಂಡಿನಲ್ಲಿ  ಅಲಂಕರಿಸಿ ಕೊಟ್ಟೆ.  ಮನಸ್ಸಾದರೆ ಘಂಟೆ ಗಟ್ಟಲೆ ಆಡುತ್ತಿದ್ದ .   
      ಆದರೆ ಈ ನಡುವೆ ಅವನು ಅವನ ಬಾಲದ ತುದಿಯನ್ನು ಸುಮ್ಮನೆ ಕುಳಿತು ಚೀಪಲು ತೊಡಗಿದ. ಇದು ನಂಗೆ ವಿಶೇಷ ಅನ್ನಿಸ ತೊಡಗಿತು. ಮಲಗುವಾಗ ಬಾಲ ಬೇಕೇ ಅವನಿಗೆ ಇಲ್ಲಾಂದ್ರೆ ನಿದ್ರೆಯೇ ಬರದು. ಮಡಿಲಿನಲ್ಲಿಟ್ಟು  ಮುದ್ದು ಮಾಡಿದರೂ ನಿದ್ರೆ ಬರುವಂತಾದರೆ  ಅನಾಯಾಸವಾಗಿ ಬಾಲ ಅವನ ಬಾಯಿಗೆ ಬರುತ್ತಿತ್ತು.  ಮೆಲ್ಲನೆ ಅವನ ಬಾಲವನ್ನು ಅವನ ಬಾಯಿ ಇಂದ ತಪ್ಪಿಸಿದರೆ ನಿದ್ರೆಯಿಂದ  ಎಚ್ಚರವಾಗುತ್ತಿತ್ತು. ಇರಲಿ ಎಂದು ಬಿಟ್ಟು ಬಿಟ್ಟೆ . 
     ಚಿನ್ನು ಗೆ ಮರ ಏರೋಕೆ ಗೊತ್ತಿಲ್ಲ, ಮತ್ತೆ ಮರ ಏರೋಕೆ ತರಬೇತಿ ಕೊಟ್ಟೆ ಇದೆಲ್ಲಾ ಕಂಡಾಗ ನಂಗೆ ಪೂರ್ಣ ಚಂದ್ರ ತೇಜಸ್ವಿ ಅವರು ಬರೆದ "ಸುಸ್ಮಿತಾ ಮತ್ತು ಹಕ್ಕಿಮರಿ" ಲೇಖನ ನೆನಪಿಗೆ ಬರ್ತಾ ಇತ್ತು .  ಈ ಚಿನ್ನು ಅವನ ಅಮ್ಮನಿಂದ ಸಿಗಬೇಕಾದ ಯಾವ ಮೂಲಭೂತ ಶಿಕ್ಷಣ ದೊರೆಯದೆ ಒಂತರ ಬೆಪ್ಪು ಆಗಿಹೋಗಿದ್ದ. 
     ಮೊದಲು ಪುಟ್ಟ ಮರಿ ಅಂತ ಅವನಿಗೆ ಮನೆಒಳಗೆ ಒಂದು ಸಣ್ಣ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಅವನ ನೈಸರ್ಗಿಕ ಕ್ರಿಯೆ ಮುಗಿಸಲು ಅವಕಾಶ ಕಲ್ಪಿಸಿ ವ್ಯವಸ್ತೆ ಮಾಡಲಾಗಿತ್ತು . ಆದರೆ ಅವನಿಗೆ ಮನೆ ಹೊರಗೆ ಹೋಗಿ ಮಾಡಬಹುದು ಎಂಬ ಜ್ಞಾನ ಬರಲೇ ಇಲ್ಲ.  ಹಗಲಿಗೋ ಮನೆ ಒಳಗೆ ಓಡಿ   ಬಂದು ಬಿಡುತ್ತಿದ್ದ. ಇದನ್ನು ಕಂಡು ಇದಕ್ಕೊದು ಪರಿಹಾರ ಮಾಡಬೇಕು ಎಂದು  ೪ ಬುಟ್ಟಿ  ಮರಳು ಸಂಗ್ರಹಿಸಿ ಹೊತ್ತು ತಂದು ಹಾಕಿ ಮನೆಯ ಹಿತ್ತಲ  ಒಂದು ಮೂಲೆಯಲ್ಲಿ ಜಾಗ ಮಾಡಿ ಕೊಟ್ಟು ಅವನ ಪೆಟ್ಟಿಗೆ ಕೂಡ ಅಲ್ಲೇ ತಂದು ಇಟ್ಟೆ. ಅಂತೂ ೨- ೩ ದಿನದ ಬಳಿಕ ಸುಸಂಸ್ಕೃತ ನಾಗಿ ಹಗಲು  ಹೊತ್ತು ಹೊರಗೆ ಮಾಡಿಕೊಳ್ಳುವಷ್ಟು ಬುದ್ದಿವಂತನಾದ. 

   ಚಿನ್ನು ನಾಯಿ ನೋಡಿ ಮರ ಹತ್ತಿ ಕೆಸರು ಗದ್ದೆಗೆ ಆಯ ತಪ್ಪಿ ಬಿದ್ದು ಮಾಡಿ ಕೊಂಡ ಆವಾಂತರ ನಾಳೆಗೆ ಇರಲಿ  

       

No comments: