Wednesday, March 20, 2013

ಮಂಜುವಿನ ಉತ್ತರ ಕಾಲ ----೧

      ನನ್ನ ಪ್ರೀತಿಯ ಮಂಜು ಮರೆಯಾದ ಬಳಿಕ ನಂಗೆ ಯಾವುದರಲ್ಲೂ  ಆಸಕ್ತಿ ಇರಲಿಲ್ಲ . ನನ್ನ ವಟ ವಟ  ಎಲ್ಲ ನಿಂತೇ ಹೋಯಿತು. ಆಗಾಗ ಆರೋಗ್ಯ ಸರಿ ಇಲ್ಲದೆ ಹೋಯಿತು . ಇದನ್ನು ಕಂಡ ಅಮ್ಮ ಎಲ್ಲ ಕಡೆ ಬೆಕ್ಕಿನ ಮರಿ ಹುಡುಕೋಕೆ ಶುರು . ನಾನು  ಮಂಜು ತರದ್ದೇ ಬೆಕ್ಕು ಬೇಕು ಎಂದು ಹಠ ಬೇರೆ ಹಿಡಿದಿದ್ದೆ. ಇದೇ ಊರಿ ಸುತ್ತಿ ಹುಡುಕಿದರೂ  ಮಂಜು ಬೆಕ್ಕಿನ ತರದ ಬೆಕ್ಕು ಸಿಗಲೇ ಇಲ್ಲ. ಮಂಜುನ ಜೊತೆಯಲ್ಲೇ ಹುಟ್ಟಿದ ಅವಳಿ ಸಹೋದರ ಒಬ್ಬ ಅಮ್ಮಮ್ಮನ ಮನೆಯಲ್ಲಿ ಉಳಿದು ಹೋಗಿದ್ದ . ಇತ್ತ  ಮಂಜುವಿನ ಅಮ್ಮ 'ಪಮ್ಮಿ' ಮತ್ತೆ ಮಾತೆಯಾಗೋ ಹಂತದಲ್ಲಿ ಇದ್ದಳು. ಮೊದಲೆಲ್ಲಾ ಅವಳಿ ಸಹೋದರನಾದ 'ಕರಿಯ'ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪಮ್ಮಿ ಬಸುರಿಯಾದ ಮೇಲೆ  ಅವನ ನೆರಳು ಕಂಡರೂ ಅಟ್ಟಿಸಿಕೊಂಡು ಹೋಗಿ ಅವನ ಮೂತಿಗೆ ತಿವಿದು ಹ್ಯಾ ....  ಪುಸ್. .  ಪುಸ್ ಎಂದು ಹಿಗ್ಗಾ ಮುಗ್ಗಾ ಹೊಡೆದು ಜಗಳವಾಡುತ್ತಿದ್ದಳು. ಪಾಪ ಕರಿಯ ಯಾವುದೂ ಅರಿಯದ ಮುಗ್ಧ ಕಂದ. ಪ್ರತಿಸಲವೂ ಹೀಗೆ ಆದರೂ ಅವ ಮಾತ್ರ ಅಮ್ಮನ  ಮಡಿಲು ಬಯಸುತ್ತಿದ್ದ.
            ಈ ನಡುವೆ ಪಮ್ಮಿ ೩ ಮರಿಗಳಿಗೆ ಅಮ್ಮ ಆದಳು . ಅವಳ ವರ್ತನೆ  ಸರಿ  ಹೋಗಲೇ ಇಲ್ಲ . ೩  ಮರಿಗಳನ್ನು ಪ್ರೀತಿಸುತ್ತಿದ್ದಳು ,ಕರಿಯನಿಗೆ ಮಾತ್ರ ಬರಿ ಹೊಡೆತ , ಹಿಂಸೆಯೇ . ಇದನ್ನು ತಾಳಲಾರದೇ ನನ್ನ ಅಮ್ಮಮ್ಮ ನಿಂಗೆ "ಬೆಕ್ಕು ಬೇಕಲ್ವಾ ? ಆ ಕರಿಯನನ್ನು ಕೊಂಡು  ಹೋಗು" ಅಂದ್ರು . ನಾನೂ ಯೋಚಿಸಿದೆ ಈ ಬಾರಿ ಪಮ್ಮಿ ಮಂಜು ಬೆಕ್ಕಿನ ಬಣ್ಣದ ಮರಿ ಇಡಲಿಲ್ಲ . ಕರಿಯ ಹೇಗೂ ಮಂಜುನ ಜೊತೆಗಾರ ಅಂತ ತೀರ್ಮಾನಿಸಿ 'ಸರಿ ಕೊಡಿ' ಎಂದು ತೊಗೊಂಡು ಬಂದೆ .
       ಕರಿಯನ ಲಾಲನೆ ಪಾಲನೆಯಲ್ಲಿ ಮತ್ತೆ ಮೊದಲಿನಂತಾದೆ . ಕರಿಯನಿಗೆ  ಕಣ್ಣು ಕಾಣುತ್ತಿರಲಿಲ್ಲ. ಅವನು ಹುಟ್ಟು ಕುರುಡ. ಉಳಿದಂತೆ ಅವನು ತುಂಬಾ ಸಾಧು ಬೆಕ್ಕು . ಹೀಗಾಗಿ ಅವನನ್ನು ಯಾರಿಗೂ ಕೊಡದೆ ಮನೆಯಲ್ಲೇ ಉಳಿಸಿ ಕೊಂಡಿದ್ದು . ಆದರೆ ಅವನ ಅಮ್ಮನ ಮಲ ತಾಯಿ ಧೋರಣೆ ತಾಳಲಾಗದೆ ಕರಿಯನನ್ನು ನಂಗೆ ಕೊಟ್ಟರು . ನಾನು  ಅವನನ್ನು ತುಂಬ ಪ್ರೀತಿಯಿಂದ ನೋಡಿ ಕೊಂಡೆ. ಪಾಪ ಅವನಿಗೆ  ಬೇಟೆಯಾಡಿ ಮಿಡತೆ , ಪಾಂತೆ ಹಲ್ಲಿ  ಹಿಡಿಯೋಕೆ ಆಗ್ತಾ ಇರ್ಲಿಲ್ಲ . ಅವನಿಗೆ ಬರಿ ಹಾಲು ಅನ್ನ , ತಿಂಡಿ ಬರೀ ಸಸ್ಯಾಹಾರಿ ಬೆಕ್ಕು ಆಗಿ ಹೋಗಿದ್ದ. ಹೀಗಾಗಿ ಅವನಿಗೆ ಆಗಾಗ ಆರೋಗ್ಯ ಸರಿ ಇರ್ತಾ  ಇರ್ಲಿಲ್ಲ. ಆಗ ಅವನಿಗೆ ಗರಿಕೆ ರಸ ತೆಗೆದು ಕುಡಿಸೋದು , ಕಿರಾತ ಕಡ್ಡಿ ಕಷಾಯ ಎಲ್ಲ ಕುಡಿಸ್ತಾ  ಇದ್ದೆ. ಅವನನ್ನು ಮನೆಯಿಂದ ಹೊರಗೆ ಬಿಡುವಂತೆ ಇರ್ಲಿಲ್ಲ  ಕಾರಣ ನಾಯಿಗಳು ಬಂದರೆ ಅವನಿಗೆ ಕಾಣದು . ಆದರೂ ಅವನಿಗೆ ಹೊರಗಿನ ಬಿಸಿಲು ಗಾಳಿ ಇಷ್ಟ ಹೀಗಾಗಿ ಸಂಜೆ ಅವನ ಜೊತೆಯೇ  ಮನೆಯ ಹೊರಗೆ ಅಡ್ದಾಡುತ್ತಿದ್ದೆ. ಉಗ್ರ  ನಾಯಿಗಳ ದೃಷ್ಟಿ ಯಿಂದ ಕಾಪಾಡುತ್ತಿದ್ದೆ.
          ಕರಿಯನಿಗೆ ಮರ ಹತ್ತುವ ಅದಮ್ಯ ಆಸೆ ಆದರೆ ಕೆಳಗೆ ಇಳಿಯಲು ಭಯ. ಮರವನ್ನು ಸರಾಗವಾಗಿ ಹತ್ತುತ್ತಿದ್ದ. ಇಳಿಯೋ ... ಅಂದರೆ ಅಲ್ಲೇ ಕೂತು ಮಿಯಾವ್ ಮಿಯಾವ್ ..  ಇದ್ದೇನೆ ನಾನು ಇಳಿ  ಅಂದರೂ ಇಳಿತಾನೆ ಇರ್ಲಿಲ್ಲ. ಎಷ್ಟೋ  ಸಲ ಮರಹತ್ತಿ ಅವನನ್ನು ಕೆಳಗೆ ಇಳಿಸುವಾಗ ನಂಗೆ ಉಸ್ಸಪ್ಪಾ ಸಾಕೋ ಸಾಕು ಈ ಕರಿಯನ ಸಹವಾಸ ಅನ್ನಿಸುತ್ತಿತ್ತು.  ಆದರೂ ಅವನನ್ನು ಮರ ಹತ್ತಿ ಇಳಿಯೋಕೆ ಸ್ವಾವಲಂಬಿಯನ್ನಾಗಿ  ಮಾಡಬೇಕೆಂದು  ಮನೆಯ ಪಕ್ಕ ಇದ್ದ ಒಂದು ಸಣ್ಣ ಮರದ ಬಳಿ ಕೊಂಡು  ಹೋಗಿ ಹತ್ತಿ ಇಳಿಸುತ್ತಿದ್ದೆ. ಕೆಲವು ಸಾರಿ ಇಳಿಯುವಾಗ ಆಯ ತಪ್ಪಿ  ಬಿದ್ದು ಬಿಡುತ್ತಿದ್ದ. ಬಿದ್ದರೆ ಮುಂದೆ ೨- ೩ ದಿನ ಮರ ಹತ್ತೋದೇ ಇಲ್ಲ. ಮಹಾ ಪುಕ್ಕಲು ....  ಅವನು ಮನೆಗೆ ಬಂದ ಮೇಲೆ ಮನೆಯಲ್ಲಿ ಇಲಿಗಳ ಕಾಟ ಇರಲಿಲ್ಲ . ಅವನ ಇರುವಿಕೆಯೇ ಇಲಿ ಕಾಟದಿಂದ ನಮಗೆ ಮುಕ್ತಿ ಕೊಟ್ಟಿತ್ತು . ಅವನ ಇಡೀ  ಜೀವಿತದಲ್ಲಿ ಏಕಮೇವ ಇಲಿ ಹಿಡಿದಿದ್ದ. ಇಷ್ಟೆಲ್ಲಾ ಮಾಡಿದರೂ ಅವನು ನನ್ನ ಮಂಜು ಬೆಕ್ಕಿನ ಸ್ಥಾನ ಪಡೆಯೋಕೆ ಸಾಧ್ಯವಾಗಲೇ ಇಲ್ಲ.
          ಕರಿಯ ಸುಮಾರು ವರ್ಷಗಳ ಕಾಲ ನನ್ನ ಒಡನಾಡಿಯಾಗಿದ್ದ . ಕೊನೆಗೆ ಹುಟ್ಟಿದವ ಸಾಯಲೇ ಬೇಕು  ಈ ತತ್ವವನ್ನು ಅನುಸರಿಸಿ ಒಂದು ದಿನ ಮಲಗಿದವ ಏಳಲೇ ಇಲ್ಲ. ನಂಗೆ ಮತ್ತೆ ಅದೇ ಬೇಸರ ಅಯ್ಯೋ ನನ್ನ ಬೆಕ್ಕು............
       ಬೋರ್ ಆಯ್ತಾ  ...??? ನಾಳೆ ನನ್ನ ಬದುಕಿ ಉಳಿಸಿದ ಸೂಪರ್ ಚಿನ್ನುನ ಎಂಟ್ರಿ .... ಅಲ್ಲಿವರೆಗೆ ಟಾ ಟಾ .....



2 comments:

padmapani said...

yaaru ree nimage ishtu sogasaagi bareyodu kalisidru?-superb,
simple narration but powerful!

Anonymous said...

ಅಜ್ಜಿಯ ಬಗ್ಗೆಯಾಗಲೀ, ಬೆಕ್ಕಿನ ಬಗ್ಗೆಯಾಗಲೀ,ಪತಿಯ ಗೆಳೆಯನ ಬಗ್ಗೆಯಾಗಲೀ, ಇನ್ನಾವುದೇ ವಿಷಯದ ಮೇಲಾಗಲೀ, ಓದಿಸಿಕೊಂಡು ಹೋಗುವ ರೀತಿಯಲ್ಲಿ ಬರೆಯುವ ತಮ್ಮ ಶೈಲಿ ಖುಷಿ ಕೊಡುತ್ತದೆ.